ಘಾಯಲ್ (ಅನುವಾದ: ಗಾಯಗೊಂಡ) ೧೯೯೦ರ ಒಂದು ಹಿಂದಿ ಸಾಹಸಪ್ರಧಾನ ಚಲನಚಿತ್ರ. ಇದನ್ನು ರಾಜ್‍ಕುಮಾರ್ ಸಂತೋಷಿ ನಿರ್ದೇಶಿಸಿದ್ದಾರೆ ಮತ್ತು ಧರ್ಮೇಂದ್ರ ನಿರ್ಮಾಣ ಮಾಡಿದ್ದಾರೆ. ಮುಖ್ಯ ಪಾತ್ರಗಳಲ್ಲಿ ಸನಿ ಡಿಯೋಲ್, ಮೀನಾಕ್ಷಿ ಶೇಷಾದ್ರಿ, ರಾಜ್ ಬಬ್ಬರ್ ಮತ್ತು ಅಮರೀಶ್ ಪುರಿ ನಟಿಸಿದ್ದಾರೆ. ಮೌಶುಮಿ ಚ್ಯಾಟರ್ಜಿ, ಅನ್ನು ಕಪೂರ್, ಓಂ ಪುರಿ, ಶರತ್ ಸಕ್ಸೇನಾ ಮತ್ತು ಸುದೇಶ್ ಬೆರಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರವು ₹೧೭ ಕೋಟಿಯಷ್ಟು ಹಣಗಳಿಸಿತು ಮತ್ತು ಸೂಪರ್-ಹಿಟ್ ಎಂದು ಘೋಷಿಸಲ್ಪಟ್ಟಿತು. ೩೬ನೇ ಫಿಲ್ಮ್‌ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಈ ಚಿತ್ರವು ಎಂಟು ನಾಮನಿರ್ದೇಶನಗಳನ್ನು ಪಡೆದು, ಅತ್ಯುತ್ತಮ ಚಲನಚಿತ್ರ, ಅತ್ಯುತ್ತಮ ನಿರ್ದೇಶಕ (ಸಂತೋಷಿಗೆ), ಅತ್ಯುತ್ತಮ ನಟ ಪ್ರಶಸ್ತಿ (ಸನಿ ಡಿಯೋಲ್‍ಗೆ) ಸೇರಿದಂತೆ ಏಳು ಪ್ರಶಸ್ತಿಗಳನ್ನು ಗೆದ್ದಿತು. ೩೮ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಸಮಾರಂಭದಲ್ಲಿ, ಈ ಚಿತ್ರವು ಹಿತಕರ ಮನೋರಂಜನೆ ಒದಗಿಸುವ ಅತ್ಯುತ್ತಮ ಜನಪ್ರಿಯ ಚಲನಚಿತ್ರ ರಾಷ್ಟ್ರಪ್ರಶಸ್ತಿಯನ್ನು ಗೆದ್ದಿತು ಮತ್ತು ಸನಿ ಡಿಯೋಲ್ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ - ವಿಶೇಷ ಉಲ್ಲೇಖ ಪಡೆದರು. ಘಾಯಲ್ ಚಿತ್ರವನ್ನು ತಮಿಳಿನಲ್ಲಿ ಭರತನ್ (೧೯೯೨) ಎಂದು, ತೆಲುಗಿನಲ್ಲಿ ಗಮ್ಯಂ (೧೯೯೮) ಎಂದು ಮತ್ತು ಕನ್ನಡದಲ್ಲಿ ಶಿವರಾಜ್‍ಕುಮಾರ್ ಹಾಗೂ ಸುಚಿತ್ರಾ ಕೃಷ್ಣಮೂರ್ತಿ ಅಭಿನಯದ ವಿಶ್ವ ಎಂದು ರೀಮೇಕ್ ಮಾಡಲಾಯಿತು. ೫ ಫ಼ೆಬ್ರುವರಿ ೨೦೧೬ರಂದು, ಘಾಯಲ್ ವನ್ಸ್ ಅಗೇನ್ ಎಂಬ ಶೀರ್ಷಿಕೆಯ ನೇರ ಉತ್ತರಭಾಗವು ಬಿಡುಗಡೆಗೊಂಡಿತು. == ಕಥಾವಸ್ತು == ಹವ್ಯಾಸಿ ಬಾಕ್ಸರ್ ಅಜಯ್ ಮೆಹ್ರಾ (ಸನಿ ಡಿಯೋಲ್) ತನ್ನ ಸೋದರ ಅಶೋಕ್ ಮೆಹ್ರಾ (ರಾಜ್ ಬಬ್ಬರ್) ಮತ್ತು ಅತ್ತಿಗೆ ಇಂದು ವರ್ಮಾಳೊಂದಿಗೆ (ಮೌಶುಮಿ ಚ್ಯಾಟರ್ಜಿ) ಮುಂಬೈಯಲ್ಲಿ ವಾಸಿಸುತ್ತಿರುತ್ತಾನೆ. ಅಶೋಕ್ ಒಬ್ಬ ಉದ್ಯಮಿಯಾಗಿದ್ದು ತನ್ನ ಕಂಪನಿಯಲ್ಲಿ ಸ್ವಲ್ಪ ತೊಂದರೆಯನ್ನು ಎದುರಿಸುತ್ತಿರುತ್ತಾನೆ. ಆದರೆ ಅದನ್ನು ತನ್ನ ಹೆಂಡತಿ ಮತ್ತು ಸೋದರ ಅಜಯ್‍ನಿಂದ ಮುಚ್ಚಿಡುತ್ತಾನೆ. ನಂತರ ಅಜಯ್‍ನನ್ನು ಬೆಂಗಳೂರಿಗೆ ತರಬೇತಿಗಾಗಿ ಕಳಿಸಲಾಗುತ್ತದೆ. ತನ್ನ ಸೋದರ ಬೆಂಗಳೂರಿನಲ್ಲಿದ್ದಾನೆಂದು ಅಜಯ್‍ಗೆ ಸಂದೇಶ ಬರುತ್ತದೆ. ಅವನು ಹೋಟೆಲನ್ನು ತಲುಪಿದಾಗ ಅಶೋಕ್ ತನಗಾಗಿ ಯಾವುದೇ ಸಂದೇಶವನ್ನು ಬಿಡದೇ ಆಗಲೇ ಹೊರಟಿದ್ದಾನೆ ಎಂದು ಗೊತ್ತಾಗುತ್ತದೆ. ಆಮೇಲೆ ಆ ದಿನ ಅವನಿಗೆ ಅಶೋಕ್‍ನಿಂದ ಕರೆ ಬರುತ್ತದೆ. ಅಮಲಿನ ಸ್ಥಿತಿಯಲ್ಲಿ ಅಶೋಕ್ ಅವನಿಗೆ ತನ್ನನ್ನು ದೀರ್ಘ ಸಮಯದಿಂದ ಬಾಧಿಸುತ್ತಿರುವ ಏನನ್ನೋ ಹೇಳಲು ಪ್ರಯತ್ನಿಸುತ್ತಿರುತ್ತಾನೆ. ಆದರೆ ದೂರವಾಣಿ ಥಟ್ಟನೆ ಕಡಿದು ಹೋಗುತ್ತದೆ. ಅವನು ಬೆಂಗಳೂರಿನಿಂದ ಮರಳಿದಾಗ, ಅವನ ಸೋದರ ಕಾಣೆಯಾಗಿದ್ದಾನೆಂದು ಗೊತ್ತಾಗುತ್ತದೆ. ಅವನ ವಿಚಾರಣೆಗಳು ಮತ್ತು ಪೋಲಿಸ್ ದೂರು ಕೇವಲ ಅವನ ಹತಾಶೆ ಮತ್ತು ತೀವ್ರ ಆಕ್ರೋಶಕ್ಕೆ ಕಾರಣವಾಗುತ್ತದೆ. ಸ್ವಲ್ಪ ಸಮಯದ ನಂತರ, ಅವನಿಗೆ ಆಕಸ್ಮಿಕವಾಗಿ ಒಬ್ಬ ಮಾದಕ ವಸ್ತುವಿನ ವ್ಯಸನಿಯಾದ, ಅಶೋಕ್‍ನ ಗೆಳೆಯ (ಅನ್ನು ಕಪೂರ್) ಭೇಟಿಯಾಗಿ ಎಲ್ಲ ನಿಗೂಢ ರಹಸ್ಯೆಗಳನ್ನು ಹೇಳುತ್ತಾನೆ. ಹಿಂದೊಮ್ಮೆ ಅಶೋಕ್ ತನ್ನ ವ್ಯವಹಾರದಲ್ಲಿ ನಷ್ಟಗಳನ್ನು ಎದುರಿಸಿದಾಗ, ಹೆಸರಾಂತ ಉದ್ಯಮಿ (ಅಮರೀಶ್ ಪುರಿ) ಅವನನ್ನು ರಕ್ಷಿಸಿರುತ್ತಾನೆ. ಬಲ್‍ವಂತ್ ಅಶೋಕ್‍ನ ಕಂಪನಿಯಲ್ಲಿ ಪಾಲುದಾರನಾಗಿ ಎಲ್ಲ ಸಾಲಗಳನ್ನು ತೀರಿಸಿರುತ್ತಾನೆ. ವಾಸ್ತವದಲ್ಲಿ ಈ ಏರ್ಪಾಟು ಬಲ್‍ವಂತ್‍ನ ಅಕ್ರಮ ಚಟುವಟಿಕೆಗಳಿಗೆ ಹೊದಿಕೆಯಾಗಿರುತ್ತದೆ. ತನ್ನ ಅಕ್ರಮ ವ್ಯವಹಾರಕ್ಕೆ ಹೊದಿಕೆ ಒದಗಿಸಲು ಬಲ್‍ವಂತ್ ಸಾಮಾನ್ಯವಾಗಿ ಪ್ರಾಮಾಣಿಕ ಜನರನ್ನು ಸಿಕ್ಕಿಸುತ್ತಿರುತ್ತಾನೆ ಮತ್ತು ಅಶೋಕ್ ಅವನ ಮುಗ್ಧ ಬಲಿಪಶುಗಳಲ್ಲಿ ಒಬ್ಬನಾಗಿರುತ್ತಾನೆ. ಆರಂಭದಲ್ಲಿ ಅಶೋಕ್ ಪ್ರತಿರೋಧಿಸಿದಾಗ, ಬಲ್‍ವಂತ್ ಅವನಿಗೆ ಭೀಕರ ಪರಿಣಾಮಗಳ ಬೆದರಿಕೆ ಹಾಕುತ್ತಾನೆ. ಆದರೆ ಅಕ್ರಮ ವ್ಯಾಪಾರವನ್ನು ನಿಲ್ಲಿಸುವ ತನ್ನ ವಿನಂತಿಗಳನ್ನು ಮುಂದುವರಿಸುತ್ತಾನೆ. ನಂತರ ಅಶೋಕ್ ಬಲ್‍ವಂತ್‍ನನ್ನು ಸಿಕ್ಕಿಸಲು ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುತ್ತಾನೆ ಮತ್ತು ಆಗಿನಿಂದ ತೊಂದರೆ ಆರಂಭವಾಗುತ್ತದೆ. ಬಲ್‍ವಂತ್ ಅಶೋಕ್‍ನನ್ನು ಅಪಹರಿಸಿ ಅವನು ಸಾಕ್ಷ್ಯಾಧಾರಗಳನ್ನು ಎಲ್ಲಿ ಇಟ್ಟಿದ್ದಾನೆಂಬುದನ್ನು ಬಹಿರಂಗಪಡಿಸಲು ಅವನಿಗೆ ಕಿರುಕುಳ ನೀಡುತ್ತಾನೆ. ಹೇಗೋ ಬಲ್‍ವಂತ್‍ನ ಬಂಟರಿಗೆ ಅಜ‍ಯ್‍ಗೆ ಈ ಆಪಾದನೆಗೆ ಗುರಿಮಾಡಬಲ್ಲ ಸಾಕ್ಷ್ಯಾಧಾರದ ಬಗ್ಗೆ ತಿಳಿದಿದೆ ಎಂದು ಗೊತ್ತಾಗಿ ಬಲ್‍ವಂತ್ ತಕ್ಷಣವೇ ಅಶೋಕ್‍ನನ್ನು ಸಾಯಿಸುತ್ತಾನೆ. ನಂತರ ಆ ಕೊಲೆಗೆ ಅಜಯ್‍ನನ್ನು ಆಪಾದಿತನನ್ನಾಗಿ ಮಾಡಲಾಗುತ್ತದೆ ಮತ್ತು ತನ್ನ ಅತ್ತಿಗೆಯೊಂದಿಗೆ ಅಕ್ರಮ ಸಂಬಂಧವಿರುವುದಾಗಿ ಆರೋಪ ಹೊರಿಸಲಾಗುತ್ತದೆ. ಅನ್ಯಾಯದ ಬೇರುಗಳು ಬಹಳ ಆಳವಾಗಿವೆ ಮತ್ತು ತನ್ನ ಹತ್ತಿರದವರೂ ಅವನ ವಿರುದ್ಧ ಹಗೆತನ ಹೊಂದಿದ್ದಾರೆ ಎಂದು ಅಜಯ್‍ಗೆ ನ್ಯಾಯಾಲಯದಲ್ಲಿ ಅರಿವಾಗುತ್ತದೆ. ಅವನಿಗೆ ನ್ಯಾಯದಲ್ಲಿ ನಂಬಿಕೆ ಚೂರುಚೂರಾಗುತ್ತದೆ ಮತ್ತು ಅವನು ತನ್ನ ಸ್ವಂತ ಮಾರ್ಗದಲ್ಲಿ ನ್ಯಾಯವನ್ನು ಅರಸುತ್ತಾನೆ. ಅವನ ಅತ್ತಿಗೆಯು ನೆರೆಹೊರೆಯವರ ಯಾತನೆ ಮತ್ತು ಕ್ರೂರ ಹೇಳಿಕೆಗಳನ್ನು ಸಹಿಸಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾಳೆ. ಜೈಲಿನಲ್ಲಿರುವಾಗ, ಅಜಯ್ ಹೃದಯದಿಂದ ಒಳ್ಳೆಯವರಾಗಿರುವ ಕೆಲವು ಇತರ ಉಗ್ರ ಅಪರಾಧಿಗಳ ಸ್ನೇಹಬೆಳೆಸುತ್ತಾನೆ. ನಂತರ ಒಂದು ದಿನ, ಅವರು ಕಾವಲುಗಾರರನ್ನು ಮಣಿಸಿ ಜೈಲಿನಿಂದ ತಪ್ಪಿಸಿಕೊಳ್ಳುತ್ತಾರೆ. ನಂತರ ಬಲ್‍ವಂತ್ ರಾಯ್‍ನನ್ನು ನಾಶಮಾಡಲು ನ್ಯಾಯಕ್ಕಾಗಿ ಅಜಯ್‍ನ ಹೋರಾಟ ಆರಂಭವಾಗುತ್ತದೆ. ಅವನು ತನ್ನನ್ನು ಕೊಲೆಯ ಆರೋಪದಲ್ಲಿ ಸಿಕ್ಕಿಸಿದ್ದ ಬಲ್‍ವಂತ್‍ನ ಆಪ್ತಮಿತ್ರರನ್ನು ಒಬ್ಬೊಬ್ಬರಾಗಿ ಸಾಯಿಸುತ್ತಾನೆ. ಅಜಯ್ ಬಲ್‍ವಂತ್‍ನನ್ನು ವಿನೋದ ವಿಹಾರೋದ್ಯಾನದಲ್ಲಿ ವಿನೀತ ಸಾಕ್ಷಿಗಳಾಗಿರುವ ಜನರು ಮತ್ತು ಪೋಲೀಸರ ಎದುರು ಕೊಲ್ಲುವುದರೊಂದಿಗೆ ಚಿತ್ರವು ಆದರ್ಶಪ್ರಾಯ ನ್ಯಾಯದ ರೂಪದೊಂದಿಗೆ ಅಂತ್ಯವಾಗುತ್ತದೆ. == ಪಾತ್ರವರ್ಗ == == ಧ್ವನಿವಾಹಿನಿ == ಸಂಗೀತವನ್ನು ಬಪ್ಪಿ ಲಹಿರಿ ಸಂಯೋಜಿಸಿದ್ದರು. "ಸಾಥ್ ಹೇ ಹಮ್ ಸಬ್ ಇಸ್ಸೆ ಬಡಿ ಕ್ಯಾ ಖುಶಿ" ಹಾಡಿನ ದುಃಖಕರ ಆವೃತ್ತಿಯನ್ನು ಕುಮಾರ್ ಸಾನು ಸ್ವತಂತ್ರವಾಗಿ ಮತ್ತು ಶಾಂತವಾಗಿ ಹಾಡಿದ್ದಾರೆ. ಈ ಚಿತ್ರದಲ್ಲಿ ಬೇರೊಂದು ಚಿತ್ರದ "ಮುಂಗಡಾ" ಹಾಡನ್ನು ಮಿತವಾಗಿ ತೋರಿಸಲಾಗಿದೆ. == ಪ್ರಶಸ್ತಿಗಳು ಮತ್ತು ನಾಮನಿರ್ದೇಶನಗಳು == ೩೮ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಗೆಲುವುಗಳು ಹಿತಕರ ಮನೋರಂಜನೆ ಒದಗಿಸುವ ಅತ್ಯುತ್ತಮ ಜನಪ್ರಿಯ ಚಲನಚಿತ್ರ – ಧರ್ಮೇಂದ್ರ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ – ತೀರ್ಪುಗಾರರ ಮಂಡಳಿಯ ವಿಶೇಷ ಪ್ರಶಸ್ತಿ - ಸನಿ ಡಿಯೋಲ್ ೩೬ನೇ ಫಿಲ್ಮ್‌ಫೇರ್ ಪ್ರಶಸ್ತಿಗಳು ಗೆಲುವುಗಳು ಅತ್ಯುತ್ತಮ ನಟ – ಸನಿ ಡಿಯೋಲ್ ಅತ್ಯುತ್ತಮ ಚಲನಚಿತ್ರ – ಧರ್ಮೇಂದ್ರ ಅತ್ಯುತ್ತಮ ನಿರ್ದೇಶಕ – ರಾಜ್‍ಕುಮಾರ್ ಸಂತೋಷಿ ಅತ್ಯುತ್ತಮ ಕಥೆ – ರಾಜ್‍ಕುಮಾರ್ ಸಂತೋಷಿ ಅತ್ಯುತ್ತಮ ಕಲಾ ನಿರ್ದೇಶಕ – ನಿತೀಶ್ ರಾಯ್ ಅತ್ಯುತ್ತಮ ಛಾಯಾಗ್ರಾಹಕ – ರಾಜನ್ ಕೊಠಾರಿ ಅತ್ಯುತ್ತಮ ಸಂಕಲನಕಾರ – ವಿ. ಎನ್. ಮಾಯೇಕರ್ ನಾಮನಿರ್ದೇಶನಗಳು ಅತ್ಯುತ್ತಮ ಪೋಷಕ ನಟ – ಓಂ ಪುರಿ == ಕ್ಷುದ್ರ ವಿಷಯಗಳು == ಈ ಚಿತ್ರವು ಮತ್ತೊಂದು ಬ್ಲಾಕ್‍ಬಸ್ಟರ್ ಚಿತ್ರವಾದ ದಿಲ್ ಬಿಡುಗಡೆಯಾದ ದಿನವೇ ಬಿಡುಗಡೆಯಾಯಿತು. ಆರಂಭದಲ್ಲಿ ದಿಲ್ ಮುಂದಿತ್ತು, ಆದರೆ ಘಾಯಲ್‍ಗೆ ದೊಡ್ಡ ಪುನರಾವರ್ತಿತ ಪ್ರೇಕ್ಷಕರನ್ನು ಹೊಂದಿತ್ತು. ೧೯೯೧ರ ವೇಳೆಗೆ ಸನಿ ಡಿಯೋಲ್ ಪ್ರಸಿದ್ಧ ಸಾಹಸ ನಟನಾದರು. ಅದರ ಪೂರ್ಣ ಓಟದ ಅಂತ್ಯದ ವೇಳೆಗೆ, ಅನೇಕ ಸಿನಿಮಾ ಮಂದಿರ ಸಮೂಹಗಳಲ್ಲಿ ಘಾಯಲ್ ದಿಲ್‍ಗಿಂತ ಹೆಚ್ಚು ಸಂಗ್ರಹಿಸಿತು. ಮೊದಲು ಈ ಚಿತ್ರವನ್ನು ಮಿಥುನ್ ಚಕ್ರವರ್ತಿಗೆ ಪ್ರಸ್ತಾಪಿಸಲಾಗಿತ್ತು ಮತ್ತು ಅವರು ಮುಖ್ಯ ನಟನಾಗಿ ನಟಿಸಲು ಸಹಿಹಾಕಿದ್ದರು. ಚಿತ್ರವನ್ನು ನಿರ್ಮಿಸಲು ನಿರ್ಧರಿಸಿದ ಧರ್ಮೇಂದ್ರ ಅವರು ಹೊರಬಂದು ಸನಿ ಡಿಯೋಲ್ ಚಿತ್ರದಲ್ಲಿ ನಟಿಸಲು ಬಿಡುವಂತೆ ಖುದ್ದಾಗಿ ಮಿಥುನ್ ಚಕ್ರವರ್ತಿಯವರನ್ನು ಕೇಳಿಕೊಂಡರು. ಧರ್ಮೇಂದ್ರದ ಬಗ್ಗೆ ತಮ್ಮ ಗೆಳೆತನ ಮತ್ತು ಗೌರವದ ಕಾರಣದಿಂದ ಮಿಥುನ್ ಚಕ್ರವರ್ತಿ ಹಾಗೆಯೇ ಮಾಡಿದರು. == ಉತ್ತರಭಾಗ == ಘಾಯಲ್ ರಿಟರ್ನ್ಸ್ ಎಂಬ ಹೆಸರಿನ ಉತ್ತರಭಾಗವನ್ನು ೨೦೧೪ರಲ್ಲಿ ಘೋಷಿಸಲಾಯಿತು. ಆದರೆ ಈ ಚಿತ್ರವು ತಯಾರಿಕೆಯನ್ನು ಪ್ರವೇಶಿಸುವ ಮುನ್ನ ಹಣಕಾಸಿನ ಸಮಸ್ಯೆಗಳನ್ನು ಎದುರಿಸಿತು. ಒಮ್ಮೆ ನಿಂತು ನಂತರ ಹಲವಾರು ಬಾರಿ ಮುಂದೂಡಲ್ಪಟ್ಟ ನಂತರ, ಚಿತ್ರವು ಅಂತಿಮವಾಗಿ ಘಾಯಲ್: ವನ್ಸ್ ಅಗೇನ್ ಎಂಬ ಶೀರ್ಷಿಕೆಯೊಂದಿಗೆ ೫ ಫ಼ೆಬ್ರುವರಿ ೨೦೧೬ರಂದು ಬಿಡುಗಡೆಯಾಯಿತು. == ಉಲ್ಲೇಖಗಳು == == ಹೊರಗಿನ ಕೊಂಡಿಗಳು == @ ಐ ಎಮ್ ಡಿ ಬಿ